ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ನಿಶ್ಚಿತ: ಸಚಿವ ಉಮೇಶ ಕತ್ತಿ

ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದು ನಿಶ್ಚಿತ. 2024ರ ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ 2 ರಾಜ್ಯವಾಗಲಿದೆ. ದೇಶದಲ್ಲಿ 50 ಹೋಸ ರಾಜ್ಯಗಳಾಗಲಿವೆ ಎಂದು ರಾಜ್ಯ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.
ಬೆಳಗಾವಿಯ ಬಾರ್ ಅಸೋಸಿಯೇಶನ್ ಗೆ ಭೇಟಿ ನೀಡಿ ಮಾತನಾಡಿದ ಅವರು, ದೇಶದಲ್ಲಿ 50 ಹೊಸ ರಾಜ್ಯಗಳನ್ನು ರಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವುದ ಖಂಡಿತ ಎಂದು ನಾನು ಹೇಳಿದ್ದು ನಿಜ. ನಾವು ನೀವು ಎಲ್ಲರೂ ಸೇರಿ ಮಾಡೋಣ. 2024ರ ಚುನಾವಣೆ ನಂತರ ಆಗುವುದು ನಿಶ್ಚಿತ. ದೇಶದಲ್ಲಿ ನರೇಂದ್ರ ಮೋದಿ ಅವರೇ 50 ರಾಜ್ಯಗಳನ್ನು ರಚಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ 3, ಉತ್ತರಪ್ರದೇಶದಲ್ಲಿ 4, ಕರ್ನಾಟಕದಲ್ಲಿ 2 ರಾಜ್ಯಗಳಾಗಲಿವೆ ಎಂದರು.
ಉತ್ತರ ಕರ್ನಾಟಕ ರಾಜ್ಯವಾಗಲೇಬೇಕು. , ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ. ಬೆಂಗಳೂರು ಟ್ರಾಫಿಕ್ ಜಾಮ್ ಹೇಳತೀರದು. 10 ಕಿಮೀ ಹೋಗಲು 1 ತಾಸು ಬೇಕು. ನನ್ನ ಮನೆಯಿಂದ ವಿಧಾನಸೌಧಕ್ಕೆ ಹೋಗಲು ಒಂದೂವರೆ ತಾಸು ಬೇಕು. ನಡೆದುಕೊಂಡು ಹೋದರೆ ಅದಕ್ಕಿಂತ ಬೇಗ ಹೋಗಬಹುದು. ಇನ್ನು ಐಟಿ ಬಿಟಿ ಬರಲು ಅಲ್ಲಿ ಅವಕಾಶವೇ ಇಲ್ಲ ಎಂದು ಕತ್ತಿ ವಿವರಿಸಿದರು.
ಬೆಳಗಾವಿಯಲ್ಲಿ ವಿಧಾನಸೌಧ ಆಗಿದೆ, ಹುಬ್ಬಳ್ಳಿ -ಧಾರವಾಡದಲ್ಲಿ ಹೈಕೋರ್ಟ್ ಆಗಿದೆ, ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಚರ್ಚೆ ನಡೆದಿದೆ. ಹಾಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಎಲ್ಲ ಮೂಲಸೌಲಭ್ಯಗಳಿವೆ ಎಂದರು.////