Belagavi News In Kannada | News Belgaum

ಅತಿಥಿ ಶಿಕ್ಷಕರಿಗೆ ೪೯.೨೭ ಲಕ್ಷ ರೂ. ಗೌರವ ವೇತನ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ಹಾಗೂ ಮೂಡಲಗಿ ಶೈಕ್ಷಣಿಕ ವಲಯವು ಮುಂಚೂಣಿಗೆ ಬರಲು, ಶಿಕ್ಷಕರ ಲಭ್ಯತೆ ಮಾಡಿಕೊಳ್ಳಲು ವಲಯದ 232 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಾಸಿಕ ಅತಿಥಿ ಶಿಕ್ಷಕರ ಸಂಭಾವನೆಯನ್ನು ನಾನೇ ಸ್ವತ: ನೀಡುತ್ತಿರುವುದಾಗಿ ಅರಭಾವಿ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸೋಮವಾರ ಸಂಜೆ ತಾಲೂಕಿನ ದುರದುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನವನ್ನು ವಿತರಿಸಿ ಮಾತನಾಡಿದ ಅವರು, ಶಿಕ್ಷಕರು ಲಭ್ಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಹೇಳಿದರು.


ಈಗಾಗಲೇ ಮೂಡಲಗಿ ವಲಯದಲ್ಲಿ ಸುಮಾರು 50 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇದು ಬೆಳಗಾವಿ ವಿಭಾಗಗಳ 59 ಶೈಕ್ಷಣಿಕ ವಲಯಗಳ ಪೈಕಿ 4ನೇ ಶೈಕ್ಷಣಿಕ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ತಯ್ಯಾರು ಮಾಡುವಲ್ಲಿ ಈ ಲಭ್ಯ ಶಿಕ್ಷಕರಿಂದ ಸಾಧ್ಯವಾಗುತ್ತಿದೆ. ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣವಾಗಿದೆ. ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ತಯ್ಯಾರು ಆಗುವಲ್ಲಿ ಶಿಕ್ಷಕರ ಪರಿಶ್ರಮವು ಅಪಾರವಾಗಿದೆ ಎಂದು ಹೇಳಿದರು.

2004ರ ನಂತರ ಈ ಭಾಗದಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ. ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಕಳೆದ ಹಲವು ವರ್ಷಗಳಿಂದ ಅತಿಥಿ ಶಿಕ್ಷಕರ ಗೌರವಧನವನ್ನು ಮಾಸಿಕವಾಗಿ ತಲಾ 5000 ರೂಗಳಂತೆ 232 ಅತಿಥಿ ಶಿಕ್ಷಕರಿಗೆ ನಾನೇ ಸ್ವತ: ಸಂದಾಯ ಮಾಡುತ್ತಿದ್ದೇನೆ. 1992 ರಿಂದಲೂ ಅತಿಥಿ ಶಿಕ್ಷಕರಿಗೆ ಗೌರವ ವೇತನ ನೀಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಇದರಿಂದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ಅತಿಥಿ ಶಿಕ್ಷಕರಿಗೂ ಅನುಕೂಲವಾದಂತಾಗಿದೆ. ವಲಯದಲ್ಲಿ 1545 ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗಳಿದ್ದು ಅವುಗಳಲ್ಲಿ 689 ಹುದ್ದೆಗಳು ಖಾಲಿ ಇವೆ. ಅದರಲ್ಲಿ 345 ಅತಿಥಿ ಶಿಕ್ಷಕರಿಗೆ ಮಾತ್ರ ಸರ್ಕಾರವು ಗೌರವ ಸಂಭಾವನೆ ನೀಡುತ್ತಿದ್ದು, ಬಾಕಿ ಉಳಿದ ಅತಿಥಿ ಶಿಕ್ಷಕರಿಗೆ ಮಾಸಿಕವಾಗಿ ನಾನೇ ವೇತನ ನೀಡುತ್ತಿದ್ದೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ರಸ್ತೆ ಕಾಮಗಾರಿ ಶೀಘ್ರ : ದುರದುಂಡಿ-ಕಲ್ಲೋಳಿ, ರಾಜಾಪೂರ-ಕಲ್ಲೋಳಿ, ಮತ್ತು ಅರಭಾವಿ-ಹುಣಶ್ಯಾಳ ಪಿಜಿ ತನಕ ರಸ್ತೆ ಅಭಿವೃದ್ದಿಯನ್ನು ಕೈಗೊಳ್ಳುತ್ತಿದ್ದೇನೆ. ಮಾರ್ಚ್ ತಿಂಗಳ ಅಂತ್ಯದೊಳಗೆ  ಈ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಸರ್ಕಾರದ ಅನುದಾನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ರಸ್ತೆ ಕಾಮಗಾರಿಗಳಿಗೆ ನಾನೇ ವೆಚ್ಚವನ್ನು ಭರಿಸುತ್ತಿದ್ದೇನೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ದುರದುಂಡಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಅಂತರಗಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ತಾ.ಪಂ ಇಓಗಳಾದ ಮುರಳಿಧರ ದೇಶಪಾಂಡೆ, ಎಫ್.ಜಿ.ಚಿನ್ನನವರ, ಮೂಡಲಗಿ ಪಿಐ ಶ್ರೀಶೈಲ ಬ್ಯಾಕೂಡ, ಸಿಡಿಪಿಓ ವಾಯ್.ಕೆ.ಗದಾಡಿ, ಡಾ|| ಆರ್.ಎಸ್.ಬೆಣಚಿನಮರಡಿ, ಮುಖಂಡರಾದ ಹೊನ್ನಜ್ಜ ಕೋಳಿ, ಮಹಾದೇವ ತಾಂಬಡಿ, ಎಸ್.ಎಲ್.ಹುಕ್ಕೇರಿ, ಅಶೋಕ ಖಂಡ್ರಟ್ಟಿ, ಡಾ|| ಎಸ್.ಎಚ್.ಗೋರಖನಾಥ, ಸೋಮಯ್ಯ ಮಠದ, ಭೀಮಶಿ ಅಂತರಗಟ್ಟಿ, ಸುಮಿತ್ರಾ ಅಂತರಗಟ್ಟಿ, ದುರದುಂಡೆಪ್ಪ ಅಂತರಗಟ್ಟಿ, ಅವಣ್ಣ ಗೌಡಿ, ಆನಂದ ಹಣಜಿ, ವಿಠ್ಠಲಗೌಡ ಪಾಟೀಲ, ಬಸು ಪಂಡ್ರೋಳಿ, ಶಿವಾನಂದ ಕಮತಿ, ಕಲ್ಲಪ್ಪ ಚೌಕಶಿ, ಮಾಳಪ್ಪ ಜಾಗನೂರ, ಶಂಕರ ಕಮತಿ, ಪುಂಡಲೀಕ ಬಾಗೇವಾಡಿ, ಅಜ್ಜಪ್ಪ ಹುಲಕುಂದ, ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ಶಿವಲಿಂಗ ಪೂಜೇರಿ, ಶ್ರೀಪತಿ ಗಣೇಶವಾಡಿ, ಬಾಳೇಶ ಜಾಧವ, ಲಕ್ಷ್ಮಣ ಗಣಪ್ಪಗೋಳ, ಮಹಾದೇವ ತುಕ್ಕಾನಟ್ಟಿ, ಮುತ್ತೆಪ್ಪ ಕುಳ್ಳೂರ, ಬಸವರಾಜ ಮಾಳೆದವರ, ಶಿವು ಕುಡ್ಡೆಮ್ಮಿ, ಸಿದ್ದಪ್ಪ ಚೂಡಪ್ಪಗೋಳ ಮಹಾದೇವ ಹೊರಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2022ರ ಮೇ ದಿಂದ ನವಂಬರ್ ತಿಂಗಳವರೆಗಿನ ಅತಿಥಿ ಶಿಕ್ಷಕರ ವೇತನ 49.27 ಲಕ್ಷ ರೂಗಳನ್ನು ವಿತರಿಸಿದರು. 16.90 ಲಕ್ಷ ರೂಗಳ ವೆಚ್ಚದ ವಿವೇಕ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. 10 ಲಕ್ಷ ರೂಗಳ ವೆಚ್ಚದ ಅಮೃತ ಶಾಲಾ ಕೊಠಡಿಗಳ ನವೀಕರಣ ಕಾಮಾಗಾರಿಯನ್ನು ಉದ್ಘಾಟಿಸಿದರು.

ಮೂಡಲಗಿ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.