Belagavi News In Kannada | News Belgaum

ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​​ಗಾಗಿ ಭಾರೀ ಪೈಪೋಟಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​​ಗಾಗಿ ಭಾರೀ ಪೈಪೋಟಿ ನಡೆದಿದ್ದು, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯಮಧ್ಯ ಪ್ರವೇಶಿಸಿ ಇಬ್ಬರ ನಡುವೆ ಸಂಧಾನ ಸಭೆ ಮಾಡಿದ್ದು, ಇಬ್ಬರಲ್ಲಿ ಒಬ್ಬರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಇದರಿಂದ ಅಂತಿಮವಾಗಿ ಕಣದಲ್ಲಿ ಸಿದ್ದರಾಮಯ್ಯನವರ ಆಪ್ತ ಉಳಿದುಕೊಂಡಿದ್ದಾರೆ.

ಹೌದು…ರಾಮದುರ್ಗಾ ಕ್ಷೇತ್ರದ ಟಿಕೆಟ್​ಗಾಗಿ ಮಾಜಿ ಶಾಸಕ ಅಶೋಕ್ ಪಟ್ಟಣ್ ಹಾಗೂ ಚಿಕ್ಕರೇವಣ್ಣ ನಡುವೆ ತೀವ್ರ ಪೈಪೋಟಿ ಪೈಪೋಟಿ ಏರ್ಪಟ್ಟಿದ್ದು, ಈ ಬಾರಿ ತಮಗೆ ಟಿಕೆಟ್​ ನೀಡಬೇಕೆಂದು ಇಬ್ಬರು ನಾಯಕರು ಪಟ್ಟು ಹಿಡಿದಿದ್ದರು. ಇದರಿಂದ ವರಿಷ್ಠರಿಗೆ ದೊಡ್ಡ ತಲೆನೋವಾಗಿತ್ತು. ಇದರಿಂದ ಮಧ್ಯ ಪ್ರವೇಶ ಮಾಡಿ ಇಬ್ಬರ ನಡುವೆ ಸಂಧಾನ ಸಭೆ ನಡೆಸಿ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ.

ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಇಬ್ಬರನ್ನೂ ಕೂರಿಸಿಕೊಂಡು ಸಂಧಾನ ಸಭೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಅಂತಿಮವಾಗಿ ಚಿಕ್ಕರೇವಣ್ಣ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಮಾಜಿ ಶಾಸಕ ಅಶೋಕ್ ಪಟ್ಟಣ್​ಗೆ ಟಿಕೆಟ್ ಕೊಡೋಣ. ಸರ್ಕಾರ ಬಂದಾಗ ಸ್ಥಾನಮಾನ ನಿಮಗೆ ನೀಡೋಣ ಎಂದು ಚಿಕ್ಕರೇವಣ್ಣಗೆ ಭರವಸೆ ನೀಡಿದ್ದಾರೆ. ಸಿದ್ದು ಮಾತಿಗೆ ಚಿಕ್ಕರೇವಣ್ಣ ಕೊನೆಗೂ ಒಪ್ಪಿಗೆ ಸೂಚಿಸಿ ಚುನಾವಣಾ ಅಖಾಡದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ತಮ್ಮ ಆಪ್ತ ಅಶೋಕ್ ಪಟ್ಟಣ್​ಗೆ​ ಮಣೆ ಹಾಕಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಶೋಕ್​ ಪಟ್ಟಣ್​, ಚಿಕ್ಕ ರೇವಣ್ಣ ಜತೆ ಮಾತನಾಡಿದ್ದೇನೆ. ಈ ಬಾರಿ ಅಶೋಕ್ ಪಟ್ಟಣ್​ಗೆ ಟಿಕೆಟ್​ ಕೊಡಿಸೋಣ. ಎಲ್ಲರೂ ಅಶೋಕ್ ಪಟ್ಟಣ್​ ಗೆಲ್ಲಲು ಶ್ರಮಿಸಲು ಹೇಳಿದ್ದೇನೆ . ಅದಕ್ಕೆ ಚಿಕ್ಕ ರೇವಣ್ಣ ಒಪ್ಪಿಗೆ ನೀಡಿದ್ದಾರೆ. ಬೇಕಿದ್ರೆ ಅವರನ್ನೆ ಕೇಳಿ ಎಂದು ರೇವಣ್ಣ ಬಳಿಕ ಕೈ ತೋರಿಸಿದರು. ಇದಕ್ಕೆ ಚಿಕ್ಕರೇವಣ್ಣ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ‌ಮಾತು ಒಪ್ಪಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಸಿದ್ದರಾಮಯ್ಯ ಇಬ್ಬರು ನಾಯಕರ ಸಂಧಾನ ಸಭೆ ನಡೆಸಿ ಅಂತಿಮವಾಗಿ ತಮ್ಮ ಆಪ್ತ ಅಶೋಕ್​ ಪಟ್ಟಣ್​ಗೆ ಟಿಕೆಟ್​​ ಖಚಿತಪಡಿಸಿದ್ದಾರೆ.