ನಾವು ಅಧಿಕಾರಕ್ಕೆ ಬಂದ್ಮೇಲೆ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದ ಸಿದ್ದರಾಮಯ್ಯ

ಬೆಳಗಾವಿ: ಒಂದು ವೇಳೆ ಬಿಜೆಪಿಯವರು ಮಾಡದೇ ಇದ್ದರೆ, ನಾವು ಅಧಿಕಾರಕ್ಕೆ ಬಂದು 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಸುಮ್ಮನೇ ದುಡ್ಡು ಇಟ್ಟಿದ್ದೀವಿ ಅಂತಾ ಹೇಳ್ತಾರೆ. ಎಲ್ಲಿ ದುಡ್ಡು ಇಟ್ಟಿದ್ದಾರೆ? 7ನೇ ವೇತನ ಜಾರಿಗೆ ಅಗತ್ಯ ಇರುವಷ್ಟು ದುಡ್ಡು ಇಟ್ಟಿಲ್ಲ. ಕೂಡಲೇ ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಜಾರಿ ಮಾಡಬೇಕಿತ್ತು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಒಂದು ವೇಳೆ ಬಿಜೆಪಿಯವರು ಮಾಡದೇ ಹೋದ್ರೆ, ನಾವು ಬಂದ್ಮೇಲೆ ಮಾಡ್ತೀವಿ. ಐದು ವರ್ಷಗಳ ಹಿಂದೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಿದ್ದೇನೆ. 10,600 ಕೋಟಿ ಹೊರೆಯಾದರೂ ನಾನು ಮಾಡಿದ್ದೆ. 6ನೇ ವೇತನ ಆಯೋಗ ಅನೌನ್ಸ್ ಮಾಡಿದ್ದೆ. ಎಲೆಕ್ಷನ್ಗೂ ಮುನ್ನ ಜಾರಿಗೆ ತಂದಿದ್ದೇನೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸುಳ್ಳು ಹೇಳುತ್ತಾರೆ. ಸುಳ್ಳು ಹೇಳಿ ಮೂಗಿಗೆ ತುಪ್ಪ ಸವರೋದು ಇವರ ಕೆಲಸವಾಗಿದೆ ಎಂದು ಟೀಕಿಸಿದರು.
ನೀತಿ ಸಂಹಿತೆ ಜಾರಿ ಆಗಲು 20 ದಿನ ಇರಬಹುದಷ್ಟೇ. ಮತ್ತೆ ಒಂದೂವರೆ ತಿಂಗಳು ಸರ್ಕಾರಿ ಕಚೇರಿಗಳು ಸ್ಥಗಿತ ಆಗುತ್ತವೆ. ಯಾವುದೇ ಕೆಲಸ ನಡೆಯಲ್ಲ. ಬಜೆಟ್ ಮಂಡಿಸುವರೆಗೂ ಬಜೆಟ್ನಲ್ಲಿದ್ದ 54 ಪರ್ಸೆಂಟ್ ಹಣ ಮಾತ್ರ ಖರ್ಚು ಮಾಡಿದ್ದಾರೆ. ಇನ್ನು 46 ಪರ್ಸೆಂಟ್ ಖರ್ಚು ಮಾಡಿರಲಿಲ್ಲ. ಒಂದು ತಿಂಗಳಲ್ಲಿ ನಿಮ್ಮ ಕೈಯಲ್ಲಿ ಖರ್ಚು ಮಾಡೋಕೆ ಆಗಲ್ಲರೀ ಅಂತಾ ಹೇಳಿದ್ದೇನೆ. ಈಗ ಸರ್ಕಾರಿ ನೌಕರರು ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಆಡಳಿತ ಯಂತ್ರ ಕುಸಿಯುತ್ತದೆ, ಕೆಲಸ ಆಗಲ್ಲ ಎಂದರು.
ಶೇ.17 ವೇತನ ಹೆಚ್ಚಿಸಿ ಸರ್ಕಾರ ಆದೇಶ ಕುರಿತು ಮಾತನಾಡಿ, ಅವರು ಹೇಳೋದು ಬೇಡ. ಮಧ್ಯಂತರ ವರದಿ ಜನರ ಮುಂದೆ ಇಡಬೇಕು. ಹಳೆಯ ಪಿಂಚಣಿ ವ್ಯವಸ್ಥೆ ನಿನ್ನೆ ಮೊನ್ನೆಯದ್ದಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು. ಹಳೆಯ ಪಿಂಚಣಿ ವ್ಯವಸ್ಥೆ ಬಗ್ಗೆ 7ನೇ ವೇತನ ಆಯೋಗದ ಅಧ್ಯಕ್ಷರು ಎಕ್ಸಾಮಿನ್ ಮಾಡಬೇಕು ಎಂದ ತಿಳಿಸಿದರು.//////