ಕೋಟೆ ರಾಜಕೀಯ ಕದನಕ್ಕೆ ನಾಡದ್ರೋಹಿ ಎಂಇಎಸ್ ಎಂಟ್ರಿ

ಬೆಳಗಾವಿ: ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಕುರಿತು ಬಿಜೆಪಿ, ಕಾಂಗ್ರೆಸ್ ಕ್ರೆಡಿಟ್ ಫೈಟ್ ವಿಚಾರವಾಗಿ ಇದೀಗ ನಾಡದ್ರೋಹಿ ಎಂಇಎಸ್ ಎಂಟ್ರಿಕೊಟ್ಟಿದ್ದು, ಶಿವಾಜಿ ಮಹಾರಾಜರ ಪ್ರತಿಮೆಯನ್ನು ರಾಜಕೀಯ ಉದ್ದೇಶಕ್ಕೆ ಎರಡು ಪಕ್ಷಗಳು ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಮಾ.19ರಂದು ಶಿವಾಜಿ ಪ್ರತಿಮೆಯನ್ನ ಶುದ್ಧಗೊಳಿಸಲು ಮುಂದಾಗಿದೆ.
ಹೌದು…..ಕಳೆದ ದಿನಗಳ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಡ ಕೋಟೆಯ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರದಲ್ಲಿ ಹಾಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತು, ಆದರೆ ಸದ್ಯ ಎಂಇಎಸ್ ಮಾರ್ಚ್ 19ರಂದು ಶಿವಾಜಿ ಪ್ರತಿಮೆಯನ್ನ ಶುದ್ಧಗೊಳಿಸಲು ಮುಂದಾಗಿದ್ದು,ಪ್ರತಿಮೆ ಶುದ್ಧೀಕರಣ ಅಂಗವಾಗಿ ಪಾದಪೂಜೆ, ಪಂಚಾಮೃತ ಅಭಿಷೇಕ ಕಾರ್ಯಕ್ರಮವನ್ನ ಹಮ್ಮಿಕೊಳ್ಳವ ಮೂಲಕ ಐತಿಹಾಸಿಕ ರಾಜಹಂಸಗಡ ಕೋಟೆ ಶಿವಾಜಿ ಪ್ರತಿಮೆಯ ರಾಜಕೀಯ ಕದನಕ್ಕೆ ನಾಡದ್ರೋಹಿ ಎಂಇಎಸ್ ಎಂಟ್ರಿ ಕೊಟ್ಟಿದೆ.
ಮಹಾರಾಷ್ಟ್ರದ ವಿವಿಧ ಕೋಟೆಗಳಿಂದ ಶಿವಜ್ಯೋತಿ ತಂದು ನಗರದಲ್ಲಿ ಮೆರವಣಿಗೆ ಮಾಡಲಿದೆ. ಮೆರವಣಿಗೆ ಬಳಿಕ ರಾಜಹಂಸಗಡಕ್ಕೆ ಜ್ಯೋತಿ ತೆಗೆದುಕೊಂಡು ಹೋಗಲಾಗುವುದು ಎಂದು ನಿರ್ಧರಿಸಲಾಗಿದೆ. ಇದರಿಂದ ಶಿವಾಜಿ ಪ್ರತಿಮೆ ಶುದ್ಧೀಕರಣದ ಮೂಲಕ ಬೆಳಗಾವಿಯಲ್ಲಿ ಎಂಇಎಸ್ ಮತಭೇಟೆ ಆರಂಭವಾಗಲಿದೆ. ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಪೆಟ್ಟು ನೀಡಲು ಒಳಗೊಳಗೆ ಸಿದ್ದತೆ ಮಾಡಿಕೊಳುತ್ತಿರುವ ಎಂಇಎಸ್, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ಸ್ಪರ್ಧೆಗೆ ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.
ಒಂದೇ ಪ್ರತಿಮೆ ಎರಡು ಬಾರಿ ಉದ್ಘಾಟನೆ: ಇನ್ನು ರಾಜಹಂಸಗಡ ಕೋಟೆಯಲ್ಲಿನ ಶಿವಾಜಿ ಮೂರ್ತಿ ಲೋಕಾರ್ಪಣೆ ವಿಚಾರವಾಗಿ ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಿದ್ದಾಜಿದ್ದಿ ಫೈಟ್ ನಡೆದು ಕೊನೆಗೂ ಎರಡು ಪಕ್ಷಗಳು ಒಂದೇ ಮೂರ್ತಿಯನ್ನ ಎರಡು ಬಾರಿ ಉದ್ಘಾಟನೆಯನ್ನ ಮಾಡಿವೆ. ಮಾರ್ಚ್ 2ರಂದು ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಪ್ರತಿಮೆ ಲೋಕಾರ್ಪಯಾದರೆ, ಇದಕ್ಕೆ ಸೆಡ್ಡು ಹೊಡೆದು ಮಾರ್ಚ್ 5ರಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಪ್ರತಿಮೆ ಉದ್ಘಾಟನೆ ಮಾಡಲಾಗಿದೆ.
ಗ್ರಾಮೀಣ ಅಕಾಡಕ್ಕೆ ಎಂಇಎಸ್ ಎಂಟ್ರಿ: ರಾಜ್ಯ ವಿಧಾನಸಭೆ ಚುನಾವಣೆಗೆ 2 ತಿಂಗಳು ಬಾಕಿ ಇರುವಾಗಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ಫೈಟ್ ತಾರಕಕ್ಕೇದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲ್ಲಲು ಹೆಬ್ಬಾಳ್ಕರ್ ಮರಾಠಿಗರ ಓಲೈಕೆಗೆ ನಿಂತರೆ, ಇತ್ತ ರಮೇಶ್ ಜಾರಕಿಹೊಳಿ ಕೂಡ ಹೆಬ್ಬಾಳ್ಕರ್ ಸೋಲಿಸಲು ಮರಾಠಿಗರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಇದೀಗ ಅಕಾಡಕ್ಕೆ ಎಂಇಎಸ್ ಎಂಟ್ರಿ ಕೊಟ್ಟಿದೆ. ಬೆಳಗಾವಿ ರಾಜಕೀಯದಲ್ಲಿ ಶಿವಾಜಿ ಮೂರ್ತಿ ಸಂಘರ್ಷ, ರಮೇಶ್ ಜಾರಕಿಹಜೊಳಿ ತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿತಂತ್ರ ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ, ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಕಿತ್ತಾಟದ ನಡುವೆ ಇದೀಗ ಎಂಇಎಸ್ ಕೂಡ ಎಂಟ್ರಿಯಾಗಿದ್ದು, ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಡ ಕೋಟೆಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಪಾಲೆಟಿಕ್ಸ್ ಇದು ಮುಂದೆ ಯಾವ ಹಂತ ತಲುಪಲಿದೆ ಕಾದು ನೋಡಬೇಕಿದೆ.