Belagavi News In Kannada | News Belgaum

1.21 ಕೋಟಿ ಮೌಲ್ಯದ ಚಿನ್ನ ನಾಪತ್ತೆ: ರೈಲ್ವೆ ಪೊಲೀಸರ ಮೇಲೆ ಶಂಕೆ

ಬೆಂಗಳೂರು: ಚಿನ್ನಾಭರಣ ಖರೀದಿಗಾಗಿ ರಾಯಚೂರಿನಿಂದ ಬಂದಿದ್ದ ಇಬ್ಬರನ್ನು ಅಡ್ಡಗಟ್ಟಿ ಬೆದರಿಸಿ 1.21 ಕೋಟಿ ರೂ. ಮೌಲ್ಯದ 2 ಕೆಜಿಗೂ ಹೆಚ್ಚು ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದವರು ರೈಲ್ವೆ ಪೊಲೀಸರು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ, ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕಂಡುಬಂದ ದೃಶ್ಯಾವಳಿ ಆಧರಿಸಿ ರೈಲ್ವೆ ವಿಭಾಗದ ಇಬ್ಬರು ಕಾನ್‍ಸ್ಟೆಬಲ್‍ಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆ ಮುಗಿದ ನಂತರವೇ ಚಿನ್ನದ ಗಟ್ಟಿ ದರೋಡೆ ಮಾಡಿದವರು ರೈಲ್ವೆ ಪೊಲೀಸರೇ ಅಥವಾ ಬೇರೆಯವರೇ ಎಂಬುದು ತಿಳಿದುಬರಲಿದೆ. ರಾಯಚೂರಿನಿಂದ ಚಿನ್ನಾಭರಣ ಖರೀದಿಗಾಗಿ ಬಂದಿದ್ದ ಅಬ್ದುಲ್ ರಜಾಕ್ ಹಾಗು ಮಲ್ಲಯ್ಯ ಎಂಬುವರನ್ನು ಆನಂದರಾವ್ ಸರ್ಕಲ್ ಬಳಿ ಇರುವ ಗ್ರೀನ್‍ಲೈಟ್ ಟ್ರಾವೆಲ್ಸ್ ಕಚೇರಿ ಸಮೀಪದ ಶೌಚಾಲಯದ ಬಳಿ ಪೊಲೀಸರೆಂದು ಹೇಳಿ ಅವರನ್ನು ಬೆದರಿಸಿ ಆಟೋದಲ್ಲಿ ಕರೆದೊಯ್ದು ಅವರ ಬಳಿ ಇದ್ದ ಬರೋಬ್ಬರಿ 2 ಕೆಜಿ 200 ಗ್ರಾಂ ತೂಕದ ಚಿನ್ನದ ಗಟ್ಟಿ, ಚಿನ್ನಾಭರಣ ಹಾಗೂ 19 ಸಾವಿರ ಹಣ ಕಸಿದುಕೊಂಡು ಇವರಿಬ್ಬರನ್ನು ಬೇರೆ ಬೇರೆ ಕಡೆ ಇಳಿಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಇವರಿಬ್ಬರ ಬಳಿ ಚಿನ್ನಾಭರಣ ಇರುವುದು ತಿಳಿದೇ ಈ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇವರಿಬ್ಬರ ಚಲನವಲನ ಗಮನಿಸಿದವರೇ ದರೋಡೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ನಿಟ್ಟಿನಲ್ಲಿ ಉಪ್ಪಾರಪೇಟೆ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.//////