ಗಗನಸಖಿ ಸಾವು ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ ,,

ಬೆಂಗಳೂರು: ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಗಗನಸಖಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಾಣವ ಹಂತಕ್ಕೆ ಬಂದಿದೆ.
ಇದುವರೆಗೂ ಪ್ರಕರಣ ನಿಗೂಢವಾಗಿತ್ತು. ಆದರೆ, ಇದೀಗ ಗಗನಸಖಿಯ ಬಾಯ್ಫ್ರೆಂಡ್ ತಪ್ಪೊಪ್ಪಿಕೊಂಡಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ.
ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ (28) ಮೃತ ಗಗನಸಖಿ. ಕೋರಮಂಗಲದ 8ನೇ ಬ್ಲಾಕ್ನ ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ತಾನು ವಾಸವಿದ್ದ ಬಾಲ್ಕನಿಯಿಂದ ಬಿದ್ದು ಅರ್ಚನಾ ಮೃತಪಟ್ಟಿದ್ದಳು. ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಸಾವಿಗೀಡಾದ ದಿನ ಅರ್ಚನಾಳ ಬಾಯ್ಫ್ರೆಂಡ್ ಸುಳಿವು ಸಿಕ್ಕಿದ್ದರಿಂದ ಆತ್ಮಹತ್ಯೆ ಪ್ರಕರಣ ಅನುಮಾನಾಸ್ಪದಾ ಪ್ರಕರಣಕ್ಕೆ ತಿರುಗಿತ್ತು.
ಅರ್ಚನಾ ಬಾಯ್ಫ್ರೆಂಡ್ ಆದೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮದುವೆ ಆಗಲು ಒಪ್ಪದಿದ್ದರೆ ಲೈಗಿಂಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಅರ್ಚನಾ ಬೆದರಿಕೆ ಹಾಕಿದ್ದಳು. ಮೃತಪಟ್ಟ ದಿನವೂ ಕೂಡ ಇದೇ ಬೆದರಿಕೆ ಮುಂದುವರಿಸಿದ್ದಳು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಕೊಲೆ ಮಾಡಿದೆ ಎಂದು ಆದೇಶ್ ತಪ್ಪೊಪ್ಪಿಕೊಂಡಿದ್ದಾನೆ.