Belagavi News In Kannada | News Belgaum

ಯಾವುದೇ ರೀತಿಯ ತಂತ್ರ, ಕುತಂತ್ರ ಮಾಡುವುದು ನನಗೆ ಗೊತ್ತಿಲ್ಲ, ಕೇವಲ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತ ಕೇಳುತ್ತೇನೆ – ಲಕ್ಷ್ಮೀ ಹೆಬ್ಬಾಳಕರ್

 

ಬೆಳಗಾವಿ: ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ನಾನು ಯಾವುದೇ ರೀತಿಯ ತಂತ್ರ, ಕುತಂತ್ರ ಮಾಡುವುದು ನನಗೆ ಗೊತ್ತಿಲ್ಲ. ಕೇವಲ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಜನರ ಆಶಿರ್ವಾದ, ಬೆಂಬಲ ಕೇಳುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿಬಸ್ತವಾಡ ಗ್ರಾಮದ ಲಕ್ಷ್ಮೀ ಪ್ಲಾಟ್ ಹಾಗೂ ಸಂತಿಬಸ್ತವಾಡ ಗ್ರಾಮದಿಂದ ತೀರ್ಥಕುಂಡೆ ಗ್ರಾಮದವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 65 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಲಕ್ಷ್ಮೀ ಹೆಬ್ಬಾಳಕರ್, ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಜನರು ನನ್ನನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದ ನಂತರ ನಾನು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಲಕ್ಷ್ಯ ಕೊಟ್ಟಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಿಲ್ಲ. ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಿಲ್ಲ. ನನ್ನ ಕರ್ತವ್ಯಕ್ಕೆ ಬದ್ದನಾಗಿ ಕಾರ್ಯನಿರ್ವಹಿಸಿದ್ದೇನೆ. ಇದೆಲ್ಲ ಜನರ ಮುಂದಿದೆ. ಮತ್ತೊಮ್ಮೆ ನನಗೆ ಆಶಿರ್ವದಿಸಿ ಎಂದು ಕೇಳಲು ನನ್ನ ಕೆಲಸವೇ ಜನರ ಮುಂದಿದೆ ಎಂದು ಅವರು ತಿಳಿಸಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಆಶ್ಪಕ್ ತಹಶಿಲ್ದಾರ, ದೇಮಣ್ಣ ನಾಯ್ಕ, ಬಸು ಬಿರಮುತಿ, ರಾಮನಿಂಗ ಕರ್ಲೇಕರ್, ಅಜಯ ಚನ್ನಿಕುಪ್ಪಿ, ರೇಣುಕಾ ಖಾನಾಪೂರಿ, ಸಕ್ಕುಬಾಯಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.