ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಗಾಳಿಗೆ ತೂರುವ ಕಾರ್ಯವಾಗಿದೆ: ಲಕ್ಷ್ಮಣ ಸವದಿ

ಬೆಳಗಾವಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಾತಾವರಣವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಗಾಳಿಗೆ ತೂರುವ ಕಾರ್ಯ ಆಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಬಳಿಕ ಮುಂದಿನ ಅವಧಿಗೆ ಡಿಸಿಎಂ ಮಾಡುವುದಾಗಿ ಹೇಳಿದ್ದರು. ನಾನೇನೂ ಡಿಸಿಎಂ ಸ್ಥಾನ ಕೇಳಿರಲಿಲ್ಲ. ಅಥವಾ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ಆದರೆ ಡಿಸಿಎಂ ಸ್ಥಾನದಿಂದ ತಗೆಯುವ ವೇಳೆ ನನ್ನನ್ನು ಒಂದು ಮಾತು ಕೇಳಲಿಲ್ಲ. ನಾನೇನೂ ಭ್ರಷ್ಟಾಚಾರ ಅಥವಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನಾ? ಎಂದು ಅವರು ಪ್ರಶ್ನಿಸಿದ್ದಾರೆ.
ಉಪಚುನಾವಣೆ ವೇಳೆ ಜವಾಬ್ದಾರಿ ಕೊಟ್ಟಾಗ ಅಭ್ಯರ್ಥಿಗಳ ಗೆಲ್ಲಿಸುವ ಕೆಲಸ ಮಾಡಿದ್ದೆ. ಈ ವೇಳೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಕೇಳಿದ್ದೆ. ಅಲ್ಲದೆ 17 ಜನರಿಗೆ ಮಾತು ಕೊಟ್ಟಿದ್ದು, ಅವರೆಲ್ಲರಿಗೂ ಟಿಕೆಟ್ ಕೊಡಬೇಕು ಎಂದಿದ್ದರು. ಆದರೆ ಶಂಕರ್ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ? ಒಂದು ಮಾನದಂಡ ಮಾಡಿದರೆ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೂ ಒಂದೇ ಇರಬೇಕು. ಅವರ ಬದುಕನ್ನೇ ಬಿಜೆಪಿಗೆ ಮುಡುಪಿಟ್ಟ ಜಗದೀಶ್ ಶೆಟ್ಟರ್ಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಗುಡುಗಿದ್ದಾರೆ.
ಅಭಿಮಾನಿಗಳು ನನ್ನನ್ನು ಕರೆದು ಚರ್ಚೆ ಮಾಡಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು. ಅಲ್ಲದೆ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ, ಇಲ್ಲವೆ ಪಕ್ಷೇತರವಾಗಿ ಸ್ಪರ್ಧಿಸಿ ಎಂದು ಆಯ್ಕೆಯನ್ನು ಕೊಟ್ಟಿದ್ದರು. ಅದರಂತೆ ಕಾಂಗ್ರೆಸ್ಗೆ ಸೇರಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ ಜನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಕ್ಷೇತ್ರದ ರೈತರು ಸ್ವಾಭಿಮಾನದಿಂದ ಬದುಕಬೇಕು ಎಂಬ ಸಂಕಲ್ಪ ಇದೆ. ರೈತರಿಗೆ ನೀಡಲಾದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ. ಒಂದೆರಡು ದಿನಗಳಲ್ಲಿ ನನ್ನ ನಾಮಪತ್ರ ಸಲ್ಲಿಸುತ್ತೇನೆ. ಬಿ ಫಾರಂ ಶನಿವಾರ ಸಂಜೆ ಬರಲಿದೆ ಎಂದು ಹೇಳಿದ್ದಾರೆ.
ಲಕ್ಷ್ಮಣ್ ಸವದಿ ದುಡುಕಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿಯವರಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ದುಡುಕಿಲ್ಲ, ನಿಜವಾಗಿ ಬಿಜೆಪಿ ನಾಯಕರು ದುಡುಕಿದ್ದಾರೆ. ಯಡಿಯೂರಪ್ಪ ಪಕ್ಷ ಬಿಟ್ಟು ಪಕ್ಷಕ್ಕೆ ಬಂದವರು ಅವರು ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಕ್ಕಿಲ್ಲ. ಜಗದೀಶ್ ಶೆಟ್ಟರ್ ನಾವು 20-25 ವರ್ಷಗಳಿಂದ ಜೊತೆಗಿದ್ದೇವೆ. ಜಗದೀಶ್ ಶೆಟ್ಟರ್ ಏನು ತಪ್ಪು ಮಾಡಿದ್ದಾರೆ? ಅವರಿಗೆ ಕೇವಲ 67 ವಯಸ್ಸು, ವಯಸ್ಸಿನ ಮಾನದಂಡ ಇದ್ರೆ ಏಕೆ ಟಿಕೆಟ್ ನೀಡುತ್ತಿಲ್ಲ. ಶೆಟ್ಟರ್ ಅಂತವರನ್ನೇ ಬಿಜೆಪಿ ಕಡೆಗಣಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.///////