ಬಿಜೆಪಿ ನಾಯಕರಿಗೆ ಅಹಂ ಹೆಚ್ಚಿದೆ: ಶೆಟ್ಟರ

ಹುಬ್ಬಳ್ಳಿ: ಜನರ ಸಹಕಾರ ಇದ್ದರೆ ಅಭಿವೃದ್ಧಿ, ಸಾಧನೆ ಮಾಡಲು ಸಾಧ್ಯ. ನಾನು-ನನ್ನಿಂದಲೇ ಎಲ್ಲ ಎಂಬ ಅಹಂಭಾವದಿಂದ ಯಾವ ಘನ ಕಾರ್ಯ ಸಾಧಿಸಲು ಸಾಧ್ಯವಿಲ್ಲ. ಆದರೆ, ಇತ್ತೀಚೆಗೆ ಬಿಜೆಪಿ ಕೆಲ ನಾಯಕರಲ್ಲಿ ಅಹಂಭಾವ ಮಿತಿ ಮೀರಿದೆ ಎಂದು ಮಾಜಿ ಮುಖ್ಯಮಂತ್ರಿ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ತೋಳನಕೆರೆಯಲ್ಲಿ ರವಿವಾರ ವಾಯುವಿಹಾರಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿ ಮಾತನಾಡಿದ ಅವರು, ಹಾಳು ಬಿದ್ದಿದ್ದ ತೋಳನಕೆರೆಯನ್ನು ಸುಂದರ ವಿಹಾರಧಾಮ ಮಾಡಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಯಿತು. ಅದನ್ನು ನಾನೆಂದು ಮರೆಯುವುದಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳಿರಲಿ, ಸಾಧನೆಯೇ ಇರಲಿ ಜನರ ಸಹಕಾರ ಇಲ್ಲವಾದರೆ ಏನನ್ನು ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿಯ ಕೆಲ ನಾಯಕರಿಗೆ ಎಲ್ಲವೂ ನನ್ನಿಂದಲೇ ಎಂಬ ಭಾವ ಮೂಡಿಬಿಟ್ಟಿದೆ. ಜನರನ್ನು ಬಿಟ್ಟರೆ ತಾವೇನು ಎಂಬುದನ್ನು ಅವರೊಮ್ಮೆ ಯೋಚಿಸಿಬೇಕಿದೆ ಎಂದರು.
ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮುಖಂಡರಾದ ಮೋಹನ ಹಿರೇಮನಿ, ಮಹೇಶ ಬುರ್ಲಿ, ಸದಾನಂದ ಡಂಗನವರ, ಗಂಗಾಧರ ದೊಡವಾಡ, ಅರುಣ ಕಡಕೋಳ, ಬಿ.ಎಸ್. ಗ್ಯಾಬ್ರಿಯಲ್, ರಮೇಶ ಯಾದವಾಡ, ಮುತ್ತು ಪಾಟೀಲ, ಮೋಹನ ಹೊಸಮನಿ, ಸತೀಶ ಮಾಡಳ್ಳಿ, ಸಿ.ಎಸ್. ಪಾಟೀಲ, ನಾಗನಗೌಡ ಪಾಟೀಲ, ಉದಯ ಇಟಗಿ, ಶಿವಶಂಕರಪ್ಪ ಹೊಂಗಲ, ರಾಜು ವಿಕಂಶಿ, ಸುನಿಲ ಕುಮಾರ ಇನ್ನಿತರರಿದ್ದರು.////