ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವಿಭಾಗ ಮಟ್ಟದ ಕಾರ್ಯಗಾರ

ಬೆಳಗಾವಿ : ಮನುಷ್ಯನಂತೆ ಜಾನುವಾರುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾನುವಾರಗಳ ರಕ್ಷಣೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು ಎಂದು ಬೆಂಗಳೂರು ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ. ಮಂಜುನಾಥ ಎಸ್ ಪಾಳೇಗಾರ ಅವರು ಹೇಳಿದರು.
ಬೆಳಗಾವಿ ಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ)ಮತ್ತು ಮುಖ್ಯ ಅಧಿಕಾರಿಗಳು (ಆಡಳಿತ) ಕಾರ್ಯಗಾರದಲ್ಲಿ ಜಾನುವಾರಗಳ ಕೃತಕ ಗರ್ಭಧಾರಣೆ ವಿಸ್ತರಣಾ ಚಟುವಟಿಕೆಗಳು, ಲಸಿಕಾ ಕಾರ್ಯಕ್ರಮ ಹಾಗೂ ಪ್ರಾಣಿ ಕಲ್ಯಾಣ ಮಂಡಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಗುರುವಾರ (ಮೇ 25) ಪಶುಪಾಲನ ಮತ್ತು ಪಶುವೈದ್ಯಕೀಯ ರೈತರ ತರಬೇತಿ ಕೇಂದ್ರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಉಪನಿರ್ದೇಶಕರಿಗೆ ನಿಗದಿಪಡಿಸಿದ ಗುರಿಗಳ ಅನ್ವಯ ವೈಜ್ಞಾನಿಕ ಪಶುಸಂಗೋಪನೆ ತರಬೇತಿಗಾಗಿ ಅಧಿಕಾರಿಗಳನ್ನು ನಿಯೋಜಿಸಬೇಕು. ಅದೇ ರೀತಿಯಲ್ಲಿ ಪಶು ಸಂಗೋಪನೆ ತರಬೇತಿಗಾಗಿ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನಿಯೋಜಿಸಬೇಕು ಅದರಂತೆ ನಿಗದಿಪಡಿಸಿದ ಎಲ್ಲ ಗುರಿಗಳನ್ನು ತಲುಪಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಾನುವಾರ ಹಾಗೂ ಒಕ್ಕೂಟ ಕ್ಷೇತ್ರಗಳ ಬಗ್ಗೆ, ಆಹಾರ ನಿಯಂತ್ರಣ, ಕ್ರಿಯಾಯೋಜನೆ ತಯಾರಿಕೆ, ಮಾರ್ಗಸೂಚಿ, ಔಷಧಿಗಳು, ರಾಸಾಯನಿಕ ಪದಾರ್ಥಗಳು ಮತ್ತು ಸಾಮಗ್ರಿಗಳ ಸರಬರಾಜುಗಳ ಕುರಿತು, ಕಟ್ಟಡಗಳ ನಿರ್ವಹಣೆ, ವಿಸ್ತರಣಾ ಘಟಕಗಳ ಬಲಪಡಿಸುವಿಕೆ, ಗ್ರಾಮೀಣ ಪಶುವೈದ್ಯ ಶಾಲೆಗಳನ್ನು ತೆರೆಯುವುದು ಮತ್ತು ಅವುಗಳನ್ನು ತಾಲೂಕು ಮಟ್ಟದ ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ನಿರ್ದೇಶನ ನೀಡಿದರು.
ಅದೇ ರೀತಿಯಲ್ಲಿ ಉಪಕರಣಗಳ ನಿರ್ವಹಣೆ, ಪಶು ಸಖಿಯರ ಕಾರ್ಯನಿರ್ವಹಣೆ, ಜಾನುವಾರಗಳ ಲಸಿಕಾ ವೇಳಾಪಟ್ಟಿ, ಹೀಗೆ ಎಲ್ಲ ಅಗತ್ಯ ವಿಷಯಗಳ ಕುರಿತು ಪಶು ವೈದ್ಯಕೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಜಾನುವಾರುಗಳ ರಕ್ಷಣೆ, ಜಾನುವಾರುಗಳ ಕೃತಕ ಗರ್ಭಧಾರಣೆ, ಗರ್ಭ ತಪಾಸಣೆ, ಲಸಿಕಾ ಕಾರ್ಯಕ್ರಮಗಳು, ತಾಂತ್ರಿಕ ತಪಾಸಣೆ, ಜಾನುವಾರು ಜಾಗೃತ ಶಿಬಿರ, ವೈಜ್ಞಾನಿಕ ತಾಂತ್ರಿಕತೆ ಪರಿಚಯ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಬೆಂಗಳೂರು ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಮಂಜುನಾಥ. ಎಸ್ ಪಾಳೇಗಾರ ಅವರು ಅಧಿಕಾರಿಗಳಿಗೆ ವಿವರಿಸಿದರು
ಕಾರ್ಯಗಾರದಲ್ಲಿ ಧಾರವಾಡದ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಬಿ ಎಲ್. ಪರಮೇಶ್ವರ ನಾಯಕ, ಬೆಳಗಾವಿಯ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ರಾಜೀವ ಕೊಲೇರ, ಬಾಗಲಕೋಟೆಯ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಶಶಿಧರ್ ನಾಡಗೌಡ, ವಿಜಯಪುರ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅಶೋಕ ಗೊಣಸಗಿ, ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.//////