ಉ.ಕ. ಭಾಗಕ್ಕೆ ಯಾವುದೇ ಸರ್ಕಾರ ಬಂದರೂ ಮಲತಾಯಿ ಧೋರಣೆ: ಸವದಿ ಬೇಸರ

ಬೆಳಗಾವಿ: ಉತ್ತರ ಕರ್ನಾಟಕ ಭಾಗಕ್ಕೆ ಯಾವುದೇ ಸರ್ಕಾರ ಬಂದರೂ ಮಲತಾಯಿ ಧೋರಣೆ ಆಗ್ತಿದೆ. ದಕ್ಷಿಣ ಭಾಗದಲ್ಲಿ ಸಾಕಷ್ಟು ಹಣದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ಬೇಸರ ವ್ಯಕ್ತಪಡಿಸಿದರು.
ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನೂತನ ಶಾಸಕ ಲಕ್ಷ್ಮಣ ಸವದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಉತ್ತರ ಕರ್ನಾಟಕ ಭಾಗ ಹಾಗೂ ದಕ್ಷಿಣ ಭಾಗದ ಅಭಿವೃದ್ಧಿಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಹಲವು ನೀರಾವರಿ ಯೋಜನೆಗಳನ್ನು ಆ ಭಾಗದಲ್ಲಿ ರೂಪಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಯಾವುದೇ ಸರ್ಕಾರ ಬಂದರೂ ಮಲತಾಯಿ ಧೋರಣೆ ಆಗ್ತಿದೆ ಎಂದರು.
ಈ ಬಾಗದ ಪ್ರಮುಖ ಯೋಜನೆಯಾದ ಆಲಮಟ್ಟಿ ಅಣೆಕಟ್ಟೆಯ ಎತ್ತರ ಈಗಾಗಲೇ 524 ಅಡಿ ಎಂದು ತೀರ್ಮಾನ ಮಾಡಲಾಗಿದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ ಆದಷ್ಟು ಬೇಗನೆ 524 ಅಡಿ ನೀರನ್ನು ಹಿಡಿದು, ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಜೊತೆಗೆ ಬೇಸಿಗೆ ಸಂದರ್ಭದಲ್ಲಿ ಪ್ರತಿ ವರ್ಷ ನದಿ ಬತ್ತುವದನ್ನು ತಪ್ಪಿಸಬಹುದು.
ಆದರೆ ಆಲಮಟ್ಟಿ ಅಣೆಕಟ್ಟೆಯ ಹೆಚ್ಚುವರಿ ನೀರು ಹಿಡಿದಿಡುವುದಕ್ಕೆ ಭೂ-ಪರಿಹಾರ ನೀಡಬೇಕು. ನಾವು ಐದು ವರ್ಷದ ಹಿಂದೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಾಗ 55 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ನೀಡಬೇಕು ಅಂದಿನ ಅಧಿಕಾರಿಗಳು ತಿಳಿಸಿದ್ದರು. ಈಗ ಅಂದಾಜು 65 ಸಾವಿರ ಕೋಟಿ ಆಗಬಹುದು, ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ಕೊಟ್ಟು ಆದಷ್ಟು ಬೇಗನೇ ಈ ಯೋಜನೆ ಸರ್ಕಾರ ಕೈಗೆತ್ತಿಕೊಳ್ಳುವಂತೆ ಒತ್ತಾಯ ಮಾಡಲಾಗುವುದು.
ಈ ಭಾಗದ ಶಾಸಕರು ಈಗಾಗಲೇ ಒಂದು ಹಂತದ ಮಾತುಕತೆ ಮಾಡಲಾಗಿದೆ ವಿಜಯಪುರ, ಬಾಗಲಕೋಟೆ, ಬೆಳಗಾವಿ ಶಾಸಕರು ಪಕ್ಷಾತೀತವಾಗಿ ಒಂದಾಗಿ ಬರುವ ಬಜೆಟ್ನಲ್ಲಿ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಯೋಜನೆ ಮಂಜೂರಾತಿಗೆ ಒತ್ತಾಯ ಮಾಡಲಾಗುವುದು ಎಂದರು./////