ಸರಿಯಾದ ಸಮಯಕ್ಕೆ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ: ಸ್ಪೀಕರ್ ಘೋಷಣೆ

ಬೆಂಗಳೂರು: ನಿಗದಿತ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು. ಪ್ರತಿದಿನ ಸಕಾಲಕ್ಕೆ ಬಂದವರ ಹೆಸರು ಪ್ರಕಟಿಸಿ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಶಾಸಕರೊಬ್ಬರು, ಬಹುಮಾನ ನೀಡುತ್ತೇವೆ ಎನ್ನುವುದು ಬೇಡ, ಪ್ರಮಾಣಪತ್ರ ಕೊಡುತ್ತೇವೆ ಎಂದು ಹೇಳಿ ಎಂಬ ಸಲಹೆ ನೀಡಿದರು. ಅದಕ್ಕೆ ಸಭಾಧ್ಯಕ್ಷರು, ಸೂಕ್ತವಾದ ಅಭಿಪ್ರಾಯ ಎಂದು ಸಮ್ಮತಿಸಿದರು. ನಿನ್ನೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಇಂದು ಪ್ರಕಟಿಸಲಾಗುವುದು. ಇಂದು ನಿಗದಿತ ಸಮಯಕ್ಕೆ ಬಂದ ಸದಸ್ಯರ ಹೆಸರನ್ನು ನಾಳೆ ಪ್ರಕಟಿಸುವುದಾಗಿ ಎಂದು ತಿಳಿಸಿದರು.
ಸದಸ್ಯರಾದ ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ದರ್ಶನ್ ಪುಟ್ಟಣ್ಣಯ್ಯ, ಸಿ.ಎನ್. ಬಾಲಕೃಷ್ಣ, ಕೌಜಲಗಿ ಮಹಾಂತೇಶ್ ಶಿವಾನಂದ್, ಅಶೋಕ್ ಕುಮಾರ್ ರೈ, ಗೋಪಾಲಕೃಷ್ಣ ಬೇಳೂರು, ಜನಾರ್ದನ ರೆಡ್ಡಿ, ನೇಮಿರಾಜ ನಾಯಕ್, ಎಂ.ಟಿ. ಕೃಷ್ಣಪ್ಪ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರ ಹೆಸರನ್ನು ಉಲ್ಲೇಖಿಸಿ ನಿಗದಿತ ಸಮಯಕ್ಕೆ ಬಂದಿದ್ದಾರೆ ಎಂದರು.
ಆಗ ಸದಸ್ಯರಾದ ಅಪ್ಪಾಜಿ ಸಿ.ಎಸ್. ನಾಡಗೌಡ ಹಾಗೂ ಸುನೀಲ್ಕುಮಾರ್ ಅವರು, ನಿನ್ನೆ ನಾವು ಕೂಡ ಸರಿಯಾದ ಸಮಯಕ್ಕೆ ಬಂದಿದ್ದೆವು. ಆದರೂ ನೀವು ವಾಚಿಸಿದ ಹೆಸರುಗಳ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ ಎಂದು ಆಕ್ಷೇಪಿಸಿದರು. ಆಗ ಸಭಾಧ್ಯಕ್ಷರು ಪರಿಶೀಲಿಸುವುದಾಗಿ ಹೇಳಿದರು.
ಜುಲೈ 3 ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಜು. 21ರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಕಲಾಪ ಸಲಹಾ ಸಮಿತಿ ಸಭೆಯ ನಿರ್ಧಾರವನ್ನು ಸ್ಪೀಕರ್ ವಿಧಾನಸಭೆ ಕಲಾಪದಲ್ಲಿ ನಿನ್ನೆ ಪ್ರಕಟಿಸಿದರು. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಜುಲೈ 5 ಕ್ಕೆ ವಿಧೇಯಕಗಳನ್ನು ಮಂಡನೆ ಮಾಡಲಾಗುತ್ತದೆ. ಜುಲೈ 10 ರಿಂದ 19 ರ ವರೆಗೆ ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ನಡೆಯಲಿದೆ. ಜುಲೈ 20 ರಿಂದ 21ಕ್ಕೆ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದಾರೆ. ಹಾಗೂ ಧನಿವಿನಿಯೋಗ ವಿಧೇಯಕಕ್ಕೆ ಅನುಮೋದನೆ ನೀಡಲಾಗುವುದು. ಬಜೆಟ್ ಚರ್ಚೆ ಮೇಲಿನ ಉತ್ತರಕ್ಕೆ ಕಾಲಾವಕಾಶ ಕಡಿಮೆ ಇದೆ ಎಂಬ ಕಾರಣಕ್ಕೆ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈ ಮುಂಚೆ ಜುಲೈ 14ರ ವರೆಗೆ ಅಧಿವೇಶನ ನಿಗದಿಯಾಗಿತ್ತು. ಇದೀಗ ಒಂದು ವಾರಗಳ ಕಾಲ ಕಲಾಪವನ್ನು ವಿಸ್ತರಿಸಲಾಗಿದೆ./////