ಯಾದಗೂಡ : ಮಹಾದೇವಿಗೆ ಭರ್ಜರಿ ಗೆಲುವು

ಹುಕ್ಕೇರಿ : ತಾಲೂಕಿನ ಯಾದಗೂಡ ಗ್ರಾಮ ಪಂಚಾಯತಿಯ ೩ನೇ ವಾರ್ಡ್ನ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾದೇವಿ ಬಸಪ್ಪ ರುಡ್ಡಗೋಳ ಅವರಿಗೆ ಭರ್ಜರಿ ಗೆಲುವು ದಕ್ಕಿದೆ..
ಮಹಾದೇವಿ ರುಡ್ಡಗೋಳ ೬೦೦ ಮತಗಳನ್ನು ಪಡೆದು ವಿಜಯದ ಪತಾಕೆ ಹಾರಿಸಿದರೆ, ಪ್ರತಿಸ್ಪರ್ಧಿ ಶಿವತಾಯಿ ಮಲ್ಲಪ್ಪ ಲೈನದಾರ ೨೬೫ ಮತಗಳನ್ನು ಪಡೆದು ಪರಾಭವಗೊಂಡರು. ಇನ್ನು ಸ್ಪರ್ಧಾ ಕಣದಲ್ಲಿದ್ದ ಸುಕುಮಾ ಕುಮಾರ ಕುಡಬಾಳೆ ೮೩, ಕಮಲಾಬಾಯಿ ಮಹಾದೇವ ಮಂಗಳೆ ೩೩ ಮತಗಳನ್ನಷ್ಟೇ ಪಡೆಯಲು ಶಕ್ಯರಾದರು..
ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಈ ಸ್ಥಾನಕ್ಕೆ ಮೊದಲು ಸದಸ್ಯರಾಗಿದ್ದ ರೇಣುಕಾ ಮೇದಾರ ಅವರ ನಿಧನದಿಂದ ಈ ಸ್ಥಾನ ಖಾಲಿಯಾಗಿತ್ತು. ಹಾಗಾಗಿ ಇದೀಗ ಉಪಚುನಾವಣೆ ನಡೆಯಿತು. ಒಟ್ಟು ೧೨೬೨ ಮತಗಳ ಪೈಕಿ ೯೮೧ ಮತಗಳು ಚಲಾವಣೆಯಾಗಿದ್ದವು. ೩೯ ಮತಗಳು ತಿರಸ್ಕೃತಗೊಂಡಿದ್ದವು..
ಮುಖಂಡರಾದ ದಯಾನಂದ ಜನಮಟ್ಟಿ, ರಾಮಪ್ಪಾ ಪಾಟೀಲ, ಲಗಮಣ್ಣಾ ಜನಮಟ್ಟಿ, ಜಗದೀಶ ಜನಮಟ್ಟಿ, ಜಾನಪ್ಪಾ ಮಗೆಣ್ಣಿ, ಹುಲೆಪ್ಪಾ ಗಡಾದ, ಸಂತೋಷ ರುಡ್ಡಗೋಳ, ಪುಂಡಲೀಕ ಬಿರಾದಾರ, ಸಿದ್ರಾಮ ಬಹಾದ್ದೂರಿ, ಮಲ್ಲಪ್ಪಾ ಮಗೆಣ್ಣಿ, ನವೀನ ಜನಮಟ್ಟಿ ಮತ್ತಿತರರ ನೇತೃತ್ವದಲ್ಲಿ ಚುನಾವಣೆ ನಡೆಯಿತು..
ಈ ಆಯ್ಕೆಗೆ ಶಾಸಕ ನಿಖಿಲ್ ಕತ್ತಿ, ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲಿ ತಮ್ಮ ಪರ ಅಭ್ಯರ್ಥಿ ಜಯ ಸಾಧಿಸುತ್ತಿದ್ದಂತೆ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವ ಆಚರಿಸಿದರು..