ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ನಿಂದ ತುರ್ತು ನೋಟಿಸ್.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ನೀಡಿದೆ. ರಾಜ್ಯದ ಜನತೆಗೆ ಗ್ಯಾರಂಟಿಗಳ ಆಮೀಷ ನೀಡಿ ವಿಧಾನಸಭಾ ಚುನಾವಣೆ ಗೆದ್ದ ಆರೋಪ ಕೇಸ್ನಲ್ಲಿ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಪರ ವಕೀಲರಿಗೆ ತುರ್ತು ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಿ ಎಂದಿದೆ..
ಕಳೆದ ಎರಡು ತಿಂಗಳ ಹಿಂದೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಗೆದ್ದು ಬೀಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಈಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಸರ್ಕಾರ ಒಂದರ ಮೇಲೊಂದರಂತೆ ಭರವಸೆಗಳನ್ನು ಈಡೇರಿಸುತ್ತಾ ಬರುತ್ತಲೇ ಇದೆ..
ಒಂದೆಡೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೆ ಮುಂದಾದರೆ, ಇನ್ನೊಂದೆಡೆ ವರುಣಾ ಮೂಲದ ಶಂಕರ್ ಎಂಬುವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಆಮೀಷವೊಡ್ಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದಾರೆ..
ಸದ್ಯ ಶಂಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಸುನೀಲ್ ದತ್ ಏಕಸದಸ್ಯ ಪೀಠ ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್ ಕೊಟ್ಟಿದೆ. ಜತೆಗೆ ಸೆಪ್ಟೆಂಬರ್ 1ನೇ ತಾರೀಕಿಗೆ ವಿಚಾರಣೆ ಮುಂದೂಡಿದೆ..