ಸಸ್ಯ ಸಂತೆ, ತೋಟಗಾರಿಕೆ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣಾ ಕಾರ್ಯಕ್ರಮ 2023

ಬೆಳಗಾವಿ, ಆ.25: ಬೆಳಗಾವಿಯ ಹ್ಯೂಮ್ ಪಾರ್ಕ್ ನಲ್ಲಿ ಸಸ್ಯ ಸಂತೆ, ತೋಟಗಾರಿಕೆ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣಾ ಕಾರ್ಯಕ್ರಮ ಸಂಸದೆ ಮಂಗಳಾ ಅಂಗಡಿ ಅವರು ಉದ್ಘಾಟಿಸಿ, ಸಸ್ಯ ಮಾರಾಟ ಮಳಿಗೆಗಳನ್ನು ವೀಕ್ಷಿಸಿದರು.
ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಇವರ ಆಶ್ರಯದಲ್ಲಿ ನಗರದ ಕ್ಲಬ್ ರೋಡ್ ಹ್ಯೊಮ್ ಪಾರ್ಕ್ ನಲ್ಲಿ ಶುಕ್ರವಾರ (ಆ.25) ರಂದು ಸಂಜೆ 4 ಗಂಟೆಗೆ ಸಸ್ಯ ಸಂತೆ, ತೋಟಗಾರಿಕೆ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತೋಟಗರಿಕೆ ಇಲಾಖೆಯ ಮೇಳದಲ್ಲಿ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಉತ್ತಮ ಗುಣಮಟ್ಟದ ಹೂವಿನ ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಪ್ರಧಾನ ಹಣ್ಣಿನ ಗಿಡಗಳು, ತಾಳೆ ಗಿಡಗಳು, ಅಣಬೆ ಉತ್ಪನ್ನಗಳು, ಜೇನು ಉತ್ಪನ್ನಗಳು, ಬೆಳಗಾವಿಯಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರ ರೋಗ ಮತ್ತು ಕೀಟನಾಶಕ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಏರೆ ಜಲ, ಎರೆಹುಳು ಗೊಬ್ಬರ ಇಲಾಖೆ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದವು.
ಜಿಲ್ಲೆಯ ಹಲವು ಭಾಗಗಳಿಂದ ವಿವಿಧ ಮಾದರಿಯ ಸಸಿಗಳನ್ನು ಖರೀದಿಸಲು ಸಾರ್ವಜನಿಕರು ಸ್ಥಳೀಯರು ಭಾಗವಹಿಸಿದರು. ಗ್ರಾಹಕರಿಂದ ಅವಶ್ಯವಿರುವ, ಸಸ್ಯಗಳು ಹಾಗೂ ವಸ್ತುಗಳನ್ನು ಖರೀದಿಸುವ ಮೂಲಕ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತೇಜನ ನೀಡಲಾಯಿತು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೇಠ್ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಬೆಳಗಾವಿ ಜಿಲ್ಲಾ ತೋಟಗಾರಿಕಾ ಸಂಘದ ಕಾರ್ಯದರ್ಶಿಯಾದ ವಿ.ಎಚ್ ಲೆಂಗಡೆ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.