Belagavi News In Kannada | News Belgaum

ಪಂಚಾಯತ ರಾಜ್ ಇಲಾಖೆಯಿಂದ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿ: ಬಸವರಾಜ ಹೆಗ್ಗನಾಯಕ.

ಬೆಳಗಾವಿ, ಸೆ.012: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣಕ್ಕಾಗಿ ಶ್ರಮಿಸುವ ಪುಮುಖ ಇಲಾಖೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಯಾದ (ಆಡಳಿತ) ಬಸವರಾಜ ಹೆಗ್ಗನಾಯಕ ಅವರು ಹೇಳಿದರು.

ಗ್ರಾಮ ಪಂಚಾಯತ ಮಹಿಳಾ ಎಸ್.ಸಿ, ಎಸ್.ಟಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ(ಸೆ.11) ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಗಳ ಸ್ವಚ್ಛತೆ, ಪರಿಸರ ಸಂರಕ್ಷಣೆ, ಶಾಲೆಗಳ ನಿರ್ವಹಣೆ, ಆರೋಗ್ಯ ಕೇಂದ್ರಗಳ ನಿರ್ವಹಣೆ, ಅಂಗನವಾಡಿಗಳ ನಿರ್ವಹಣೆ, ಪಶು ಆಸ್ಪತ್ರೆ ನಿರ್ವಹಣೆ ಹಾಗೂ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳು, ರಸ್ತೆ, ಚರಂಡಿ ಮುಂತಾದ ಅತ್ಯಮೂಲ್ಯ ಸೇವೆಗಳನ್ನು ಕಲ್ಪಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ಗ್ರಾಮ ಆಡಳಿತ ಸೌಧ ಗ್ರಾಮ ಪಂಚಾಯತಿಗಳು ಎಂದು ಹೇಳಿದರು.
ಗ್ರಾಮಗಳನ್ನು ಸುಸ್ಥಿರ ಅಭಿವೃದ್ಧಿಗೊಳಿಸಲು ನರೇಗಾ ಸ್ವಚ್ಛ ಭಾರತ ಮಿಷನ್ (ಗ್ರಾ) 15ನೇ ಹಣಕಾಸು ಯೋಜನೆ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸ್ವಂತ ಸಂಪನ್ಮೂಲಗಳು ಮುಂತಾದವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳನ್ನು ಆಕರ್ಷಣೀಯ ಕೇಂದ್ರಗಳನ್ನಾಗಿಸಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಪುಯತ್ನಿಸಬೇಕು ಎಂದು ಹೇಳಿದರು.

ಗ್ರಾಮಗಳಲ್ಲಿನ ಅಸ್ಪೃಶ್ಯತೆ ನಿವಾರಣೆ, ಬಾಲ್ಯ ವಿವಾಹ ನಿಷೇಧಿಸುವುದು, ಎಲ್ಲ ಜಾತಿ, ಧರ್ಮಗಳ ಸಂಪ್ರದಾಯಗಳನ್ನು ಗೌರವಿಸಿ, ಶಾಂತಿ ಮತ್ತು ಸೌಹಾರ್ಧಯುತ ಹಳ್ಳಿಗಳನ್ನಾಗಿ ಮಾಡಲು ತಾವುಗಳು ಪರಿಶ್ರಮಿಸಬೇಕು ಎಂದರು.

ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಬೇಕು, ಕೃಷಿಕರ ಬಡವರ, ದೀನದಲಿತರ ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಮಿಡಿಯಬೇಕು. ಮೇಲಾಧಿಕಾರಿಗಳೂಂದಿಗೆ ಹಾಗೂ ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದು ಸೂಕ್ತ ಎಂದು ಹೇಳಿದರು.

ಕೆಡಿಪಿ, ಗ್ರಾಮ ಸಭೆ, ಸಾಮಾನ್ಯ ಸಭೆ, ವಾರ್ಡ್ ಸಭೆಗಳನ್ನು ನಿಯಮಿತವಾಗಿ ಜರುಗಿಸಬೇಕು ಹಾಗೂ ಗ್ರಾಮದ ಯಾವುದೇ ಸಮಸ್ಯೆಗೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂಬ ಕಿವಿಮಾತನ್ನು ಬೆಳಗಾವಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಯಾದ (ಆಡಳಿತ) ಬಸವರಾಜ ಹೆಗ್ಗನಾಯಕ ಅವರು ಹೇಳಿದರು.

ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ (ಆಡಳಿತ) ರಾಹುಲ ಕಾಂಬಳೆ, ಸಂಪನ್ಮೂಲ ವ್ಯಕ್ತಿಗಳಾದ ಕುಸುಮಾ ರಾಮಾಪುರ, ಬಾಳಪ್ಪಾ ಭಜಂತ್ರಿ, ಪಂಚಾಯತ ರಾಜ್ ಸಹಾಯಕ ನಿರ್ದೇಶಕರಾದ ಗಣೇಶ ಹಾಗೂ ಮತ್ತಿತರರು ಉಪಸ್ಥಿತರಿದ್ದರು.