Belagavi News In Kannada | News Belgaum

ಕುಟುಂಬದ ನಾಲ್ವರು ಆತ್ಮಹತ್ಯೆ

ತಿರುವನಂತಪುರಂ: ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಎರ್ನಾಕುಲಂನ ಕದಮಕ್ಕುಡಿ ಎಂಬಲ್ಲಿ ನಡೆದಿದೆ.
ಮೃತರನ್ನು ನಿಜೋ (39), ಪತ್ನಿ ಶಿಲ್ಪಾ (29), ಮಕ್ಕಳನ್ನು ಅಬ್ಲೆ (7) ಹಾಗೂ ಅರೋನ್ (5) ಎಂದು ಗುರುತಿಸಲಾಗಿದೆ. ಹಣದ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಿಜೋ ಹಾಗೂ ಶಿಲ್ಪಾ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳು ಬೆಡ್ ಮೇಲೆ ಶವವಾಗಿ ಬಿದ್ದಿದ್ದರು.
ಪೊಲೀಸರ ಪ್ರಕಾರ, ದಂಪತಿ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದರು. ಕೆಳಗಿನ ಮಹಡಿಯಲ್ಲಿ ನಿಜೋ ಪೋಷಕರು ಹಾಗೂ ಸಹೋದರ, ಆತನ ಕುಟುಂಬ ವಾಸವಾಗಿತ್ತು. ಮೊದಲು ಮಕ್ಕಳಿಗೆ ವಿಷವುಣಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾವು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ..?; ಎಂದಿನಂತೆ ಮಕ್ಕಳು ಬೆಳಗ್ಗಿಂದ ಕಾಣಿಸಿರಲಿಲ್ಲ. ಹೀಗಾಗಿ ನಿಜೋ ತಾಯಿ ಮೇಲಿನ ಮಹಡಿಗೆ ಮಕ್ಕಳನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ನಾಲ್ವರ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಹಣಕಾಸಿನ ತೊಂದರೆಯಿಂದಲೇ ಆತ್ಮಹತ್ಯೆಗೆ ಶರಣಾಗಿರುವುದಾಗಿ ದಂಪತಿಯ ಸಂಬಂಧಿಕರು ತಿಳಿಸಿದ್ದಾರೆ.
ನಿಜೋ ಆರ್ಟಿಸ್ಟ್ ಆಗಿದ್ದು, ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಶಿಲ್ಪಾ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದಳು. ಹಣದ ಸಮಸ್ಯೆ ನಿವಾರಿಸಲೆಂದು ಕೆಲಸ ಹುಡುಕಿಕೊಂಡು ಹೋದರೂ ಅಲ್ಲಿ ಅವಳಿಗೆ ಬೇಕಾದ ಕೆಲಸ ಸಿಕ್ಕಿಲ್ಲವೆಂದು ವಾಪಸ್ಸಾಗಿದ್ದಳು. ಒಟ್ಟಿನಲ್ಲಿ ಹೆಚ್ಚುವರಿ ಆರ್ಥಿಕ ಹೊಣೆಗಾರಿಕೆ ಕುಟುಂಬವನ್ನು ಈ ಕೃತ್ಯ ಎಸಗುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.