Belagavi News In Kannada | News Belgaum

ಬೆಳಗಾವಿಯಲ್ಲಿ ಸಂಭ್ರಮದ ‘ಈದ್‌-ಮಿಲಾದ್‌’ ಮೆರವಣಿಗೆ

ಬೆಳಗಾವಿ: ಸತತ ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌-ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಪ್ರತಿವರ್ಷ ಈದ್‌-ಮಿಲಾದ್‌ ದಿನವೇ ಮೆರವಣಿಗೆ ನಡೆಯುತ್ತಿತ್ತು..

ಈ ಬಾರಿಯೂ ಹಬ್ಬದ ದಿನವೇ(ಸೆಪ್ಟೆಂಬರ್‌ 28ರಂದು) ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯೂ ಇದ್ದಿದ್ದರಿಂದ ಮುಸ್ಲಿಮರು..

ಈದ್‌ ಮೆರವಣಿಗೆ ಮುಂದೂಡಿ ಸಾಮರಸ್ಯ ಮೆರೆದಿದ್ದರು. ಭಾನುವಾರ ಮುಸ್ಲಿಮರೊಂದಿಗೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಈದ್‌-ಮಿಲಾದ್‌ ಮೆರವಣಿಗೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು..

ಇಲ್ಲಿನ ಹಳೇ ಪಿ.ಬಿ. ರಸ್ತೆಯ ಜಿನ್ನಾ ಚೌಕ್‌ನಿಂದ ಆರಂಭಗೊಂಡ ಮೆರವಣಿಗೆ, ಕೇಂದ್ರೀಯ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಂಚರಿಸಿ ಕ್ಯಾಂಪ್‌ ಪ್ರದೇಶದಲ್ಲಿರುವ ಹಜರತ್‌ ಸೈಯದ್‌ ಅಸದ್‌ಖಾನ್‌ ದರ್ಗಾ ಆವರಣ ತಲುಪಿತು..

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನರು, ಮಳೆಯಲ್ಲೂ ಉತ್ಸಾಹದಿಂದ ಹೆಜ್ಜೆಹಾಕಿದರು. ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮಕ್ಕಳು, ಯುವಕರು ಇಸ್ಲಾಂ ಧರ್ಮದ ಧ್ವಜಗಳನ್ನು ಹಾರಿಸಿ ಸಂಭ್ರಮಿಸಿದರು..

ಕವ್ವಾಲಿಗಳು ಜನರನ್ನು ರಂಜಿಸಿದವು. ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ರೂಪಕಗಳು ಗಮನಸೆಳೆದವು. ಮೆರವಣಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಮಂಜೂರ್ ಆಲಂ ಹಬ್ಬದ ಸಂದೇಶ ನೀಡಿದರು..

ಶಾಸಕ ಆಸೀಫ್‌ ಸೇಠ್‌, ಮಾಜಿ ಶಾಸಕ ಫಿರೋಜ್‌ ಸೇಠ್‌, ಮುಖಂಡರಾದ ಅಕ್ಬರ್‌ ಬಾಗವಾನ, ಮಹಮ್ಮದ್‌ ಪೀರಜಾದೆ, ಮೌಲಾನಾ ಸರ್ದಾರ್‌, ರಂಜೀತ ಚವ್ಹಾಣಪಾಟೀಲ, ವಿಕಾಸ ಕಲಘಟಗಿ ಇತರರಿದ್ದರು. ವಿವಿಧ ಸಂಘಟನೆಗಳ ಮುಖಂಡರು ತಂಪು-ಪಾನೀಯ, ಸಿಹಿ ಪದಾರ್ಥಗಳು ಹಾಗೂ ನೀರು ವಿತರಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಮೆರವಣಿಗೆ ನಡೆಯಿತು..