ಮಕ್ಕಳ ಶಿಕ್ಷಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಹಕಾರ; ಸತೀಶ ನಾಯ್ಕ
ನೂತನ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟನೆ

ಬೆಳಗಾವಿ: ” ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ಅವರು ಹೇಳಿದರು.
ತಾಲೂಕಿನ ಬಸವನ ಕುಡಚಿಯ ಶ್ರೀ ಕಲ್ಮೇಶ್ವರ ಬಸವೇಶ್ವರ ಮಂಗಲ ಕಾರ್ಯಾಲಯ ಮಂಗಳವಾರ ಆಯೋಜಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ ಖಾಸಭಾಗ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗಾಂಧಿನಗರ ವಲಯದ ಸಂಯುಕ್ತಾಶ್ರಯದಲ್ಲಿ ನೂತನ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಪೂರ್ಣವಾದ ಸಮಾಜ ನಿರ್ಮಾಣ ಮಾಡಲು ಪರಮ ಪೂಜ್ಯರು ಧರ್ಮೋತ್ಥಾನ ಟ್ರಸ್ಟ್, ಮೆಡಿಕಲ್ ಟ್ರಸ್ಟ, ಶಿಕ್ಷಣ ಸಂಸ್ಥೆ, ಶಾಂತಿವನ ಟ್ರಸ್ಟ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ ರಚನೆ ಮಾಡಿ ಕುಟುಂಬ, ಸಮುದಾಯ ಅಭಿವೃದ್ಧಿ ಮತ್ತು ಆರ್ಥಿಕ ಸ್ವಾವಲಂಬಿಯಾಗಲು ಈ ಎಲ್ಲಾ ಯೋಜನೆ ಪ್ರಾರಂಭಿಸಿದ್ದು ಇದರ ಪ್ರಯೋಜನ ಪಡೆಯಬೇಕೆಂದು ಎಂದರು.
ಯೋಜನೆಯಲ್ಲಿ ಹುಟ್ಟಿನಿಂದ ಸಾವಿನವರೆಗಿನ ಯೋಜನೆಗಳಿವೆ. 400 ಕ್ಕೂ ಅಧಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಮಾಡಲಾಗಿದೆ, 10200 ಹಾಲಿನ ಡೈರಿಗಳ ಕಟ್ಟಡ ರಚನೆಗೆ ಅನುದಾನ ನೀಡಲಾಗಿದೆ , 20000 ನಿರ್ಗತಿಕ ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದೆ, 650 ಕೆರೆಗಳ ಹೂಳೆತ್ತುವ ಮೂಲಕ ಪುನಃಶ್ಚೇತನ ಮಾಡಲಾಗಿದೆ, ಶಾಲೆಗಳಿಗೆ ಡೆಸ್ಕ ಬೇಂಚ್ ಒದಗಿಸಲಾಗಿದೆ ಶಾಲಾ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಶಿಕ್ಷಕರ ಒದಗಿಸಲಾಗಿದೆ, ಲಕ್ಷಾಂತರ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ಕೆಲಸ ಮಾಡಲಾಗಿದೆ. ಈ ದಿನ ಜವಾಬ್ದಾರಿ ಪಡೆದ ಪ್ರತಿಯೊಬ್ಬರು ಯೋಜನೆಯ ಜನಪರ ಈ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು 9 ಒಕ್ಕೂಟಗಳಿಗೆ ಪದಗ್ರಹಣ ಮಾಡುವ ಮೂಲಕ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾವೀರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಗರ ಸೇವಕರಾದ ಬಸವರಾಜ ಮೋದಗೆಕರ, ಬಸವೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷರಾದ ಶೀತಲ ಪಾಟೀಲ,ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬಸವರಾಜ ಹಣ್ಣಿಕೆರಿ, ಯೋಜನಾಧಿಕಾರಿಯವರಾದ ಮಂಜುನಾಥ ಎನ್ ಆರ್ ಉಪಸ್ಥಿತರಿದ್ದರು. ಮೇಲ್ವಿಚಾರಕ ರಾಜಿತ ಭಂಡಾರಿ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ಗೌಡ ಸ್ವಾಗತಿಸಿದರು. ಸೇವಾಪ್ರತಿನಿಧಿ ನೇತ್ರಾವತಿ ವಂದಿಸಿದರು. ಸೇವಾಪ್ರತಿನಿಧಿಗಳಾದ ಸುನಂದ, ರೇಖಾ ಸಂಘದ ಸದಸ್ಯರುಇತತರು ಇದ್ದರು