Belagavi News In Kannada | News Belgaum

ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

ಬೆಂಗಳೂರು: ಶಾಸಕ ಮುನಿರತ್ನ ಅವರು ಅರಮನೆ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅವರ ಕಾಲಿಗೆ ಬಿದ್ದು ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ಕಂಬಳ ಭೂಮಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ಅವರು ವೇದಿಕೆ ಮುಂಭಾಗದಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ಕಾಯುತ್ತಿದ್ದರು. ಕಾರ್ಯಕ್ರಮದ ಬಳಿಕ ಡಿಕೆ ಶಿವಕುಮಾರ್ ಅವರು ವೇದಿಕೆಯಿಂದ ಕೆಳಗೆ ಬಂದ ವೇಳೆ ಮುನಿರತ್ನ ಅವರು ಡಿಕೆಶಿ ಅವರ ಕಾಲಿಗೆ ಬಿದ್ದು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಪತ್ರವನ್ನು ನೀಡಿದ್ದಾರೆ.
ಕಾಂಗ್ರೆಸ್ 126 ಕೋಟಿ ರೂ. ಅನುದಾನ ವಾಪಸ್ ಪಡೆದ ಹಿನ್ನೆಲೆ ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಾಸಕರನ್ನು ಭೇಟಿ ಮಾಡಿ ಅವರ ಮನವೊಲಿಸಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಿಎಸ್‌ವೈ ಭರವಸೆ ಹಿನ್ನೆಲೆ ಮುನಿರತ್ನ ಉಪವಾಸ ಸತ್ಯಾಗ್ರಹ ಹಿಂಪಡೆದು ಅರಮನೆ ಮೈದಾನಕ್ಕೆ ತೆರಳಿ ಅನುದಾನ ಬಿಡುಗಡೆ ಮಾಡುವಂತೆ ಡಿಕೆಶಿಗೆ ಮನವಿ ಪತ್ರ ಸಲ್ಲಿಸಿದರು.
ಮುನಿರತ್ನ ಅವರ ಮನವಿಯನ್ನು ಸ್ವೀಕರಿಸಿದ ಬಳಿಕ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರು ಮನವಿ ಪತ್ರ ಕೊಟ್ಟಿದ್ದಾರೆ. ನಾನು ಬೆಂಗಳೂರು ಕಂಬಳ ಭೂಮಿ ಪೂಜೆಗೆ ಬಂದಿದ್ದೆ. ಪ್ರಜಾಪ್ರಭುತ್ವದಲ್ಲಿ ಧರಣಿ, ಹೋರಾಟ ಎಲ್ಲಾ ಆಗಬೇಕು. ಮುನಿರತ್ನ ಇಲ್ಲಿ ಬಂದು ಸೀನ್ ಕ್ರಿಯೇಟ್ ಮಾಡಬಾರದಿತ್ತು. ನಾನು ಅವರನ್ನು ಭೇಟಿ ಮಾಡುತ್ತೇನೆ. ಭೇಟಿಗಾಗಿ ಸಮಯ ನಿಗದಿ ಮಾಡುತ್ತೇನೆ. ಈಗ ಮೈಸೂರು ದಸರಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದರು.
ಯಾರೂ ನನ್ನ ಕಾಲಿಗೆ ಬೀಳುವ ಅವಶ್ಯಕತೆ ಇಲ್ಲ. ಬೇಕಾದರೆ ಜನರ ಕಾಲಿಗೆ ಬೀಳಲಿ. ನನ್ನ ಕಾಲಿಗೆ ಬೀಳಿಸಿಕೊಳ್ಳಲು ನಾನು ಸ್ವಾಮೀಜಿ ಅಲ್ಲ ಎಂದು ಹೇಳಿದರು. ಈ ಹಿಂದೆ ಮುನಿರತ್ನ ಅನುದಾನದ ವಿಚಾರವಾಗಿ ಡಿಕೆಶಿ ಕಾಲಿಗೆ ಬೀಳುವುದಾಗಿ ಹೇಳಿಕೆ ನೀಡಿದ್ದರು. ಇದೀಗ ನುಡಿದಂತೆ ಡಿಕೆಶಿ ಕಾಲಿಗೆ ಬಿದ್ದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.//////